Sunday, October 27, 2024

ಉತ್ತಮ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ: ವಾದಿರಾಜ ಮಡ್ಮಣ್ಣಾಯ

ಇನ್ನಾ: ಸಮಾಜ ಅಭಿವೃದ್ಧಿ ಉತ್ತಮ ಶಿಕ್ಷಣದಿಂದ ಮಾತ್ರ ಸಾಧ್ಯ. ಉತ್ತಮ ಶಿಕ್ಷಣ ಪಡೆಯುವುದು ಜನ ಸಾಮಾನ್ಯರಿಗೆ ಇಂದು ಕಷ್ಟವಾಗಿದೆ. ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅದನ್ನೇ ಆಸ್ತಿ ಎಂದು ಪರಿಗಣಿಸಬೇಕು ಎಂದು ನಿವೃತ್ತ ಶಿಕ್ಷಕ, ಶ್ರೀ ಭಾರ್ಗವ ಟ್ರಸ್ಟ್‌ (ರಿ) ಇನ್ನಾ ಇದರ ಆಡಳಿತ ಟ್ರಸ್ಟಿಗಳಾದ ವಾದಿರಾಜ ಮಡ್ಮಣ್ಣಾಯ ಅವರು ಹೇಳಿದರು. Scholarship distributed by Shri Bhargava Trust R Inna Karkala.

ಅವರು ರಾಮದಾಸ್‌ ಮಡ್ಮಣ್ಣಾಯ ಅವರ ನೇತೃತ್ವದ ಶ್ರೀ ಭಾರ್ಗವ ಟ್ರಸ್ಟ್‌ (ರಿ) ಇನ್ನಾ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

“ಅರ್ಜಿ ಸಲ್ಲಿಸಿದ ಎಲ್ಲ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ನೀಡಲಾಗಿದೆ. ಕೆಜಿಯಿಂದ ಪಿಜಿ ವರೆಗೂ ವಿದ್ಯಾರ್ಥಿ ವೇತನ ನೀಡಿದ್ದೇವೆ. ಕನಿಷ್ಠ 5,000 ದಿಂದ ಗರಿಷ್ಠ 50,000ವರೆಗೂ ನೆರವು ನೀಡಲಾಗಿದೆ. ಇಂದು ಪ್ರಾಥಮಿಕ ಶಾಲಾ ಶಿಕ್ಷಣಕ್ಕೂ ನಿರೀಕ್ಷೆಗೂ ಮೀರಿದ ಶುಲ್ಕವಿದೆ. ಟ್ರಸ್ಟ್‌ನ ಕಾನೂನಿವ ವ್ಯಾಪ್ತಿಯಲ್ಲಿ ನಾವು ನಮ್ಮಿಂದಾದ ಸಹಾಯವನ್ನು ಪ್ರತಿ ವರ್ಷ ಮಾಡುತ್ತಿದ್ದೇವೆ, ಭಾರ್ಗವ ಟ್ರಸ್ಟ್‌ನ ನಾಲ್ವರು ಆಡಳಿತ ಟ್ರಸ್ಟಿಗಳು ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಅಂಕಗಳ ಆದಾರದ ಮೇಲೆ ಎಲ್ಲರಿಗೂ ನೆರವನ್ನು ನೀಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಅತ್ಯಂತ ಆಸಕ್ತಿಯಿಂದ ಓದಿ, ತಮ್ಮ ವೈಯಕ್ತಿಕ ಬೆಳವಣಿಗೆಯ ಜೊತೆಯಲ್ಲಿ ಉತ್ತಮ ಸಮಾಜವನ್ನು ಕಟ್ಟುವತ್ತ ಗಮನ ಹರಿಸಬೇಕು,” ಎಂದು ವಾದಿರಾಜ ಮಡ್ಮಣ್ಣಾಯ ಹೇಳಿದರು.

ಸುಮಾರು 46 ವಿದ್ಯಾರ್ಥಿಗಳಿಗೆ 5 ಲಕ್ಷ ರೂ, ಮೊತ್ತದ ವಿದ್ಯಾರ್ಥಿ ವೇತನವನ್ನು ಟ್ರಸ್ಟ್‌ ಮೂಲಕ ವಿತರಿಸಲಾಯಿತು. ಶ್ರೀ ಭಾರ್ಗವ ಟ್ರಸ್ಟ್‌ ರಿ. ಇನ್ನಾ ಇದರ ಕಾರ್ಯದರ್ಶಿ ವಿಶ್ವನಾಥ್‌ ಭಟ್ಟ್‌ ಇನ್ನಾ ಮಾತನಾಡಿ, “ಹೆತ್ತವರು ಬಡವರಾಗಿರುತ್ತಾರೆ ಆದರೆ ವಿದ್ಯಾರ್ಥಿಗಳು ಪ್ರತಿಭಾವಂತರಾಗಿರುತ್ತಾರೆ. ಅಂಥ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಿನ ಅಗತ್ಯವಿದೆ. ಬಡತನದಲ್ಲಿದ್ದರೂ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಉತ್ತಮ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆ ಕಸನು ನನಸಾಗಿಸುವಲ್ಲಿ ನಮ್ಮ ಟ್ರಸ್ಟ್‌ ನೆರವು ನೀಡುತ್ತ ಬಂದಿದೆ.ವಿದ್ಯಾರ್ಥಿಗಳು ಓದಿನ ಜೊತೆಯಲ್ಲಿ ಭಕ್ತಿಯನ್ನೂ ಮೈಗೂಡಿಸಿಕೊಳ್ಳಬೇಕು. ಹತ್ತಿರದ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಮಾಡುವುದು ಅಥವಾ ಮನೆಯಲ್ಲೇ ದೇವರ ಪ್ರಾರ್ಥನೆ ಮಾಡುವುದರಿಂದ ಉತ್ತಮ ಸಂಸ್ಕಾರ ಬದುಕಿನಲ್ಲಿ ಅಳವಡಿಕೆಯಾಗುತ್ತದೆ. ನಮ್ಮ ಶ್ರಮದ ಜೊತೆಯಲ್ಲಿ ದೇವರ ಶ್ರೀರಕ್ಷೆ ಇದ್ದರೆ ಬದುಕಿನ ಹಾದಿ ಸುಗಮವಾಗುತ್ತದೆ,” ಎಂದು ಹೇಳಿದರು.

ಶ್ರೀ ಭಾರ್ಗವ ಟ್ರಸ್ಟ್‌ನ ಆಡಳಿತ ಟ್ರಸ್ಟಿಗಳಾದ ರಾಮ ಮಡ್ಮಣ್ಣಾಯ, ಖಜಾಂಜಿ ರಾಜಾ ಭಟ್‌, ಸತೀಶ್‌, ರಾಜು, ಗಿರೀಶ್‌ ಮಡ್ಮಣ್ಣಾಯ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಮುಂದಿನ ತಿಂಗಳು ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ರಾಮದಾಸ್‌ ಮಡ್ಮಣ್ಣಾಯ ಅವರು ವಿದ್ಯಾರ್ಥಿಗಳೊಂದಿಗೆ ಮುಖಾಮುಖಿ ನಡೆಸಿ ಅವರ ಶೈಕ್ಷಣಿಕ ಬದುಕಿಗೆ ನೆರವಾಗುವ ಸಲಹೆಗಳನ್ನು ನೀಡಲಿದ್ದಾರೆ.

Related Articles