Thursday, March 28, 2024

ಟೆನಿಸ್ ಕ್ರಿಕೆಟ್ ನ ದ್ರುವತಾರೆ ಸ್ವಸ್ತಿಕ್

ಕೆ.ಆರ್.ಕೆ. ಆಚಾರ್ಯ, ಕೋಟ 

ಕ್ರಿಕೆಟ್ ಜಗತ್ತಿನ ಯಾವುದೇ  ಕ್ರಿಕೆಟ್ ತಂಡ ಅಭ್ಯಾಸ ನಡೆಸುವಾಗ ಅಲ್ಲಿ ಸ್ವಲ್ಪ ಹೊತ್ತು ನಿಂತು ಗಮನಿಸಿದರೆ ಲೆದರ್ ಬಾಲ್ ನಡುವೆ ಅಲ್ಲಲ್ಲಿ ಟೆನಿಸ್ ಬಾಲ್ ನಲ್ಲಿ ಅಭ್ಯಾಸ ಮಾಡುವುದನ್ನು ಗಮನಿಸಬಹುದು. ಕ್ರಿಕೆಟ್ ಜಗತ್ತಿನ ಯಾವುದೇ ಆಟಗಾರನನ್ನು ಗಮನಿಸಿ ಆತನ ಯಶಸ್ಸಿನ ಆರಂಭಕೆ ಟೆನಿಸ್ ಬಾಲ್ ಕ್ರಿಕೆಟ್ ಮೂಲ ಪ್ರೇರಣೆ ಆಗಿರುತ್ತದೆ. ಟೆನಿಸ್ ಬಾಲ್ ಆಡದೆಯೇ ನೇರವಾಗಿ ಲೆದರ್ ಬಾಲ್ ಕ್ರಿಕೆಟ್ ಆಡಿರುವವರು ವಿರಳ. ಏಕೆಂದರೆ ಟೆನಿಸ್ ಬಾಲ್ ಕ್ರಿಕೆಟ್ ಎಲ್ಲ ಕ್ರಿಕೆಟಿಗೂ ತಾಯಿ.

ಇಲ್ಲಿ ಹೇಳ ಹೊರಟಿದ್ದು ಟೆನಿಸ್ ಬಾಲ್ ಕ್ರಿಕೆಟ್ ಮೂಲಕ ಕನ್ನಡಿಗರ ಮನಗೆದ್ದ , ಹಳ್ಳಿಯ ಕ್ರಿಕೆಟ್ ಅಭಿಮಾನಿಗಳ ಹೃದಯಗೆದ್ದ ಶಿವಮೊಗ್ಗದ ಸ್ವಸ್ತಿಕ್ ನಾಗರಾಜ್ ಎಂಬ ಯುವ ಕ್ರಿಕೆಟಿಗನ ಕತೆಯನ್ನ.

ಹೌದು ಈ 28ರ ಹರೆಯದ ಈ ಯುವ ಕ್ರಿಕೆಟಿಗನ ಸಾಧನೆಯೇ ಅಂತದ್ದು.ಟೆನಿಸ್ ಕ್ರಿಕೆಟ್ ಲೋಕದ ಹೊಸ ಆವಿಷ್ಕಾರ,ಪ್ರಜ್ವಲಿಸುವ ಮಿಂಚು. ಅಬ್ಬರಿಸುವ ಗುಡುಗು. ಯಾವುದೇ ಅಂತಾರಾಷ್ಟ್ರೀಯ ಆಟಗಾರನಿಗೆ ಹೋಲಿಸುವುದಿದ್ದರೆ ನಾ ಸೂಚಿಸುವ ಮೊದಲ ಹೆಸರೇ ದಕ್ಷಿಣ ಆಫ್ರಿಕಾದ ಸರ್ವಶ್ರೇಷ್ಠ ಆಟಗಾರ ಮಿ.360 “ಎ‌.ಬಿ.ಡಿ ವಿಲ್ಲಿಯರ್ಸ್”. ಮೈದಾನದ ಮೂಲೆ ಮೂಲೆಗೂ ಲೀಲಾಜಾಲವಾಗಿ ನಾನಾ ಭಂಗಿಯಲ್ಲಿ ಬೌಂಡರಿ,ಸಿಕ್ಸರ್ ಗಳನ್ನು ಸಿಡಿಸುವ ಮನಮೋಹಕ ಆಟಗಾರ,ರಿವರ್ಸ್ ಸ್ವೀಪ್ ಸ್ಪೆಷಲಿಸ್ಟ್.

ರಾಜ್ಯ ಟೆನಿಸ್ ಕ್ರಿಕೆಟ್ ಗೆ ದಿಗ್ಗಜ ಆಟಗಾರರನ್ನು (ಚರಣ್,ಚಿರು,ಸುಜಯ್,ಬಾಬು,ಪಿಳ್ಳೆ,ಸನ್ನು) ಕೊಡುಗೆಯಾಗಿ ಪರಿಚಯಿಸಿದ ತಂಡವಾದ ” ಎಸ್‌.ಝಡ್.ಸಿ.ಸಿ”(ಸೌತ್ ಝೋನ್ ಕ್ರಿಕೆಟ್‌ ಕ್ಲಬ್)ಪರವಾಗಿ ಕ್ರಿಕೆಟ್ ಜೀವನ ಆರಂಭಿಸಿದ ಈ ಆಟಗಾರ ಪ್ರಸ್ತುತ ಅರಬ್ ರಾಷ್ಟ್ರಗಳಲ್ಲೂ ತನ್ನ ಅದ್ಭುತ ಆಟದ ಪರಿಚಯವನ್ನಿತ್ತು ವಿಶಿಷ್ಟ ಛಾಪೊಂದನ್ನು ಮೂಡಿಸಿದ್ದಾರೆ. ಬ್ಯಾಟಿಂಗ್ ಜೊತೆ ತನ್ನ ಚಾಣಾಕ್ಷ ಬೌಲಿಂಗ್ ಮುಖಾಂತರ ಅಗ್ರಪಂಕ್ತಿಯ ಆಟಗಾರರ ವಿಕೆಟ್ ಉರುಳಿಸಿ,ಪಂದ್ಯದಿಂದ ಪಂದ್ಯಕ್ಕೆ ತನ್ನ ತಂಡಕ್ಕಾಗಿ ಸಂಪೂರ್ಣ ಸಾಮರ್ಥ್ಯವನ್ನು ಧಾರೆ ಎರೆದು ಪ್ರತಿಷ್ಟಿತ ಪ್ರಶಸ್ತಿಗಳನ್ನು ಜಯಿಸಿಕೊಡುವ ಟ್ರಂಪ್ ಕಾರ್ಡ್. ಉಡುಪಿ ಕರಾವಳಿಯಲ್ಲಿ ನಡೆಯುವ ಟೂರ್ನಿಗಳಿಗಾಗಿ ಅತಿಥಿ ಆಟಗಾರನಾಗಿ ಆಡುವ ಈ ಆಟಗಾರ, ರಾಜ್ಯದ ಪ್ರಬಲ ತಂಡಗಳಾದ “ನ್ಯಾಶ್ ಬೆಂಗಳೂರು, ಫ್ರೆಂಡ್ಸ್ ಬೆಂಗಳೂರು,ಉಡುಪಿಯ ಬಿ.ಬಿ.ಸಿ ಅಗ್ರಹಾರ, ಜಾನ್ಸನ್ ಕುಂದಾಪುರಗಳ ಪರವಾಗಿ ಆಡಿ ವಿಜಯಕ್ಕೆ ಕಾರಣೀಭೂತನಾದ ಕ್ಲೆವರ್ ಮೈಂಡೆಡ್ ಆಟಗಾರ.

ಸರಣಿ ಶ್ರೇಷ್ಠ

ಬೆಂಗಳೂರಿನಲ್ಲಿ ಸರಣಿಶ್ರೇಷ್ಟ ಪ್ರಶಸ್ತಿಗಾಗಿ ಪಡೆದ 3 ಬೈಕ್ ಗಳು,ಸೂರಲ್ಪಾಡಿಯಲ್ಲಿ 1, ಕುಂದಾಪುರ ಪ್ರತಿಷ್ಠಿತ ಚಕ್ರವರ್ತಿ ಟ್ರೋಫಿಯಲ್ಲಿ 1 ಬೈಕ್, ಒಟ್ಟಾರೆ 5 ಬೈಕ್ ಗಳನ್ನು,ನೂರಾರು ಆಕರ್ಷಕ ಟ್ರೋಫಿಗಳನ್ನು ಗೆದ್ದಿರುವ ಸ್ವಸ್ತಿಕ್ ಕರಾವಳಿ ಕ್ರಿಕೆಟ್ ನ ಅದ್ಭುತ ಪ್ರತಿಭೆ. ಪಡುಬಿದ್ರಿಯಲ್ಲಿ ನಡೆದ ” ವೆಂಕಟೇಶ್ ಮೆಮೋರಿಯಲ್ ಟ್ರೋಫಿಯಲ್ಲಿ “ನ್ಯಾಶ್” ಪರವಾಗಿ ಆಡಿ ನಿರ್ಣಾಯಕ ಸೆಮಿ ಫೈನಲ್ ನಲ್ಲಿ ಅಂಪಾಯರ್ ನೀಡದ ನಾಟ್ ಔಟ್ ತೀರ್ಪನ್ನು ಸ್ವಸ್ತಿಕ್ ಸ್ವಯಂ ಔಟೆಂದು ಘೋಷಿಸಿ ಪೆವಿಲಿಯನ್ ನತ್ತ ಮರಳುವ ಮೂಲಕ ಕ್ರೀಡಾ ಸ್ಫೂರ್ತಿಗೆ ಸಾಕ್ಷಿಯಾದರು. ಇದು ಇಂದಿನ ಪ್ರ

ಬೆಸ್ಟ್ ಆಲ್ ರೌಂಡರ್

ಬೀಡಿನ ಗುಡ್ಡೆ ಅಂಗಣದಲ್ಲಿ ಸಿಡಿಸಿದ ಸತತ ೩ ಅರ್ಧಶತಕಗಳು, ಉದ್ಯಾವರ, ಸಾಲಿಗ್ರಾಮದ‌ ಹಳೆಕೋಟೆ, ಕುಂದಾಪುರದ ಗಾಂಧಿ ಮೈದಾನದ ಮೂಲೆ ಮೂಲೆಗೂ ಸಿಡಿಸಿದ ಆಕರ್ಷಕ ಬೌಂಡರಿ ಸಿಕ್ಸರ್ ಗಳು ಅಭಿಮಾನದಲಿ ಅಚ್ಚಳಿಯದೆ ಉಳಿಯುವ ಆಟಗಳು. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿರುವ ಇವರು ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.ಉದ್ಯೋಗದ ಒತ್ತಡದ ನಡುವೆ ಪ್ರಾಕ್ಟೀಸ್ ಗಾಗಿ ಸಿಗುವ ಅತ್ಯಲ್ಪ ಅವಧಿಯಲ್ಲೂ ಕಠಿಣ ಶ್ರಮದ ಮೂಲಕ ಕ್ರಿಕೆಟ್ ಜೀವನ ಮುಂದುವರೆಸಿರುತ್ತಾರೆ.

ಕಡಿಮೆ ಅವಧಿಯಲ್ಲಿ ತಾನೇರಿದ ಎತ್ತರವನ್ನು ಅರಿಯದಂತೆ ಇರುವ ನಿಗರ್ವಿ, ಸೌಮ್ಯ, ಸರಳ, ಸ್ಪುರದ್ರೂಪಿ, ಮುಗ್ಧ ಆಟಗಾರ, ಆತ್ಮೀಯ ಮಿತ್ರರು, ಟೆನಿಸ್ ಕ್ರಿಕೆಟ್ ನ ಧ್ರುವತಾರೆ
“ಸ್ವಸ್ತಿಕ್ ನಾಗರಾಜ್” (ಪುಟ್ಟಾ) ಅವರಿಗೆ ಸ್ಪೋರ್ಟ್ಸ್ ಮೇಲ್ ವತಿಯಿಂದ ಶುಭ ಹಾರೈಕೆ.

Related Articles