Thursday, April 25, 2024

ಯುಇಎನಲ್ಲಿ ಮಿಂಚಿದ ಕರ್ನಾಟಕ ಪ್ರೀಮಿಯರ್ ಲೀಗ್

ಸ್ಪೋರ್ಟ್ಸ್ ಮೇಲ್ ವರದಿ

ತಾಯಿ ನೆಲದಲ್ಲಿ ಸಾಧ್ಯವಾದಷ್ಟು ಟೆನಿಸ್ ಬಾಲ್ ಕ್ರಿಕೆಟ್ ಆಡಿದರು. ನಂತರ ಬದುಕನರಸುತ್ತ ಬೇರೆ ಬೇರೆ ಊರುಗಳಿಗೆ ಮುಖ ಮಾಡಿದರು. ಒಂದಿಷ್ಟು ಕ್ರಿಕೆಟ್ ಆಟಗಾರರು  ಕೊಲ್ಲಿ ರಾಷ್ಟ್ರಗಳಿಗೂ ತೆರಳಿದರು. ಕ್ರಿಕೆಟ್ ಜತೆಗಿನ ಅವರ ಬಂಧ, ಅನುಬಂಧ ಹಾಗೆಯೇ ಉಳಿಯಿತು. ಕೆಲಸದ ನಡುವೆ ಆಡುವ ಹಂಬಲ ಹಸಿರಾಗಿಯೇ ಇದ್ದಿತು.ಅದಕ್ಕಾಗಿಯೇ ಟೂರ್ನಿಗಳನ್ನು ನಡೆಸಿದರು. ತಮ್ಮಲ್ಲೇ ತಂಡಗಳನ್ನು ಕಟ್ಟಿ ಆಡಿದರು. ಕ್ರಿಕೆಟ್‌ನ ಮರೆಯಲಾಗದ ಬಂಧವೇ ಕರ್ನಾಟಕ ಪ್ರೀಮಿಯರ್ ಲೀಗ್. ಅದು ನಡೆದದ್ದು ಯುಎಇಯಲ್ಲಿ.

ಅಜ್ಮಾನ್ ನ ಹಮ್ರಿಯಾ ಕ್ರಿಕೆಟ್ ಅಂಗಣ ಇಲ್ಲಿ ನಡೆದ ಒಂದು ದಿನದ ಕರ್ನಾಟಕ ಪ್ರೀಮಿಯರ್ ಲೀಗ್ ಟೆನಿಸ್ ಬಾಲ್ ಕ್ರಿಕೆಟ್  ಟೂರ್ನಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಆಟಗಾರರ ಸಂಗಮದಂತಿತ್ತು.
ಈ ಟೂರ್ನಿಯನ್ನು ಆಯೋಜಿಸಿರುವುದು ತಂಡಗಳ ಸಾಮರ್ಥ್ಯವನ್ನು ಅಳೆಯಲಿಕ್ಕಲ್ಲ ಬದಲಾಗಿ ಕನ್ನಡಿಗರನ್ನು ಒಂದಾಗಿಸಲು, ಅವರಲ್ಲಿದ್ದ ಕ್ರಿಕೆಟ್ ಪ್ರೀತಿಯನ್ನು ವ್ಯಕ್ತಪಡಿಸಲು. ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ ಎಂದು ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿರುವ ಚಕ್ರವರ್ತಿ ಕುಂದಾಪುರ ತಂಡದ ನಾಯಕ ಕುಂದಾಪುರ ಕೋಡಿಯ ರಿಜ್ವಾನ್ ಹೇಳಿದ್ದಾರೆ. ತಂಡದ ಮ್ಯಾನೇಜರ್ ಆಗಿ ಪ್ರದೀಪ್ ಹೆಗ್ಡೆ ಕಾರ್ಯನಿರ್ವಹಿಸಿದ್ದಾರೆ.
ಟೆನಿಸ್‌ಬಾಲ್ ಕ್ರಿಕೆಟ್‌ನಲ್ಲಿ ಕುಂದಾಪುರದ ಚಕ್ರವರ್ತಿ ತಂಡ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಈ ತಂಡದ ಪರ ಆಡಿದ ಅನೇಕ ಆಟಗಾರರು ಈಗ ದೇಶ ವಿದೇಶಗಳಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆ  ತಾವು ಆಡಿದ ತಂಡದ ಮೇಲಿನ ಪ್ರೀತಿಯನ್ನು ಇನ್ನೂ ಹಸಿರಾಗಿರಿಸಿಕೊಂಡಿದ್ದಾರೆ. ಅಂಥವರಲ್ಲಿ ಕುಂದಾಪುರದ ರಿಜ್ವಾನ್ ಹಾಗೂ ಪ್ರದೀಪ್ ಮತ್ತು ಅವರ ಗೆಳೆಯರು. ಗಲ್ಫ್‌ನಲ್ಲಿ ನಡೆದ ಒಂದು ದಿನದ ಕೆಪಿಎಲ್ ಟೂರ್ನಿಯಲ್ಲಿ ಸ್ಪರ್ಧಿಸಿದ ತಂಡಕ್ಕೂ ಚಕ್ರವರ್ತಿ ಕುಂದಾಪುರ ಎಂದು ಹೆಸರಿಟ್ಟಿರುವುದು ವಿಶೇಷ.
ಮೊದಲ ಪಂದ್ಯದಲ್ಲಿ ಚಕ್ರವರ್ತಿ ಕುಂದಾಪುರ ಆಟೋ ಡೀಲ್ ತಂಡದ ವಿರುದ್ಧ 7 ವಿಕೆಟ್‌ಗಳ ಅಂತರರದಲ್ಲಿ ಜಯ ಗಳಿಸಿತು. ದೇವಿ ಪ್ರಸಾದ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಪಡೀಲ್ ಚಾಲೆಂಜರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚಕ್ರವರ್ತಿ ಕುಂದಾಪುರ ತಂಡ 8 ವಿಕೆಟ್ ಜಯ ಗಳಿಸಿತು. ಸುಖೇಶ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇಲೆವೆನ್ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚಕ್ರವರ್ತಿಗಳಿಗೆ  4 ರನ್ ಅಂತರದಲ್ಲಿ  ವಿರೋಚಿತ ಸೋಲು. ಕುಡ್ಲಾ ಸ್ಟ್ರೈಕರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚಕ್ರವರ್ತಿಗಳಿಗೆ 30 ರನ್ ಅಂತರದ ಭರ್ಜರಿ ಜಯ. ರತೀಶ್ ಪೂಜಾರಿ ಪಂದ್ಯಶ್ರೇಷ್ಠರೆನಿಸಿದರು.
ಹೀಟ್‌ಶೀಲ್ಡ್ ಶಿಮಂತೂರು ಗ್ಲಾಡಿಯೇಟರ್ಸ್ ವಿರುದ್ಧ ನಡೆದ ಮೊದಲ ಕ್ವಾಲಿಯರ್ ಪಂದ್ಯದಲ್ಲಿ  7 ವಿಕೆಟ್ ಜಯ. ಪ್ರದೀಪ್ ಹೆಗ್ಡೆ ಮತ್ತೊಮ್ಮೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಫೈನಲ್ ಪಂದ್ಯದಲ್ಲಿ ಹೀಟ್ ಶೀಲ್ಡ್ ಗ್ಲಾಡಿಯೇಟರ್ಸ್ ವಿರುದ್ಧ ಚಕ್ರವರ್ತಿಗಳಿಗೆ ಸೋಲಿನ ಆಘಾತ.
ಈ ಟೂರ್ನಿಯ ಯಶಸ್ಸಿನಲ್ಲಿ ಅನೇಕ ಸಹೃದಯಿಗಳು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದಾರೆ. ಪ್ರದೀಪ್ ಹೆಗ್ಡೆ, ಅಶ್ರಫ್, ಅನಿಲ್ ಡೊನಾಲ್ಡ್, ರತೀಶ್, ಹ್ಯಾರಿಸ್, ನಿತ್ಯ, ಸುಧೀರ್, ಖಾದರ್, ನಲ್ಲು, ಶರತ್, ಅಶ್ವಿನಿ, ಅವಿನಾಶ್ ಅವರ ಪ್ರೋತ್ಸಾಹವು ಸದಾ ಸ್ಮರಣೀಯ.
ಫೈನಲ್ ಆಡಿದ ತಂಡಗಳ ವಿವರ
ಚಕ್ರವರ್ತಿ ಕುಂದಾಪುರ
ಮಾಲೀಕರು-ಅದ್ವಿಕಾ
ಮ್ಯಾನೇಜ್-ಪ್ರದೀಪ್ ಹೆಗ್ಡೆ
ರಿಜ್ವಾನ್ ಕೋಡಿ (ನಾಯಕ), ಧೀರಜ್ ಕಟೀಲ್, ಶಾನ್ ಉಡುಪಿ, ಸುಖೇಶ್ ಕಟೀಲ್, ಮೊಹಮ್ಮದ್ ಜಿಯಾದ್, ಪ್ರದೀಪ್ ಹೆಗ್ಡೆ, ಹನೀಫ್ ನಫೀಜ್, ರತೀಶ್ ಪೂಜಾರಿ, ದೇವಿ ಪ್ರಸಾದ್, ಸೋನಿತ್ ಶೆಟ್ಟಿ, ಹುಸೇನ್ ಆಶ್ರಫ್, ಫಹ್ರಾನ್, ಸೂರ್ಯಕಾಂತ್.
ಹೀಟ್‌ಶೀಲ್ಡ್ ಶಿಮಂತೂರು ಗ್ಲಾಡಿಯೇಟರ್ಸ್
ಮಾಲೀಕರು-ಪ್ರೇಮನಾಥ್ ಶೆಟ್ಟಿ
ಮ್ಯಾನೇಜರ್-ಕಿಶೋರ್ ಶೆಟ್ಟಿ
ರೋಹನ್ (ನಾಯಕ), ಗುರುರಾಜ ಶೆಟ್ಟಿ, ನಿಖೇಶ್ ಪೂಜಾರಿ, ಅಶೋಕ್ ಮೆರ್ವಿನ್, ಶರತ್ ಶೆಟ್ಟಿ, ಗುರು ಆಚಾರಿ, ದಿನೇಶ್ ಶೆಟ್ಟಿ, ಮೊಹಮ್ಮದ್ ಅನೀಸ್, ಕಿಶೋರ್ ಶೆಟ್ಟಿ, ಫ್ರಾನ್ಸಿಸ್, ಮೊನೀಶ್ ರಾವ್, ವಾಸು ಕಾಂಚನ್, ಅನಿತ್ ಕುಮಾರ್.

Related Articles