Thursday, April 25, 2024

ಅತ್ಯಾಚಾರಿ ಎಂದಾಕೆಯನ್ನೇ ಮದುವೆಯಾದ!

ಕೋಲ್ಕೊತಾ 

ಆತ ವಿಶ್ವ ಟೇಬಲ್ ಟೆನಿಸ್ ರಾಂಕಿಂಗ್‌ನಲ್ಲಿ ೫೮ನೇ ಸ್ಥಾನದಲ್ಲಿದ್ದ, ಕೇವಲ ೨೫ ವರ್ಷದ ಅಂತರದಲ್ಲಿ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಬಾರಿ ಚಿನ್ನ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದ. ಆದರೆ ನಾಲ್ಕು ತಿಂಗಳ ಹಿಂದೆ ೧೮ ವರ್ಷದ ಯುವತಿಯೊಬ್ಬರು ಆತನ ಮೇಲೆ ಅತ್ಯಾಚಾರದ ಆರೋಪ ಹೊರಿಸಿದಳು. ದಿಕ್ಕು ಕಾಣದಾದ ಆತನಿಗೆ  ಟಿ ಟಿ ಇಂದಲೇ ಹಿಂದೆ ಸರಿಯಬೇಕಾಯಿತು.. ಅಲ್ಲಿ ಯಾಲವುದೇ ರೀತಿಯ ಪ್ರಯೋಜನವಾಗಲಿಲ್ಲ. ಬೇರೆ ದಾರಿ ಕಾಣದೆ ಟೇಬಲ್ ಟೆನಿಸ್‌ನಲ್ಲಿ ಮುಂದುವರಿಯುವುದಕ್ಕಾಗಿ ಆಕೆಯನ್ನೇ ಮುದುವೆಯಾದ.

ಇದು ಬೇರೆ ಯಾರ ಕತೆಯಲ್ಲ.  ಭಾರತದ ಶ್ರೇಷ್ಠ ಟೇಬಲ್ ಟೆನಿಸ್ ಆಟಗಾರ ಸೌಮ್ಯಜೀತ್ ಘೋಷ್ ಅವರ ಬದುಕಿನ ಕತೆ. ಈ ಘಟನೆಯಿಂದಾಗಿ ಸೌಮ್ಯಜೀತ್‌ಗೆ ಕಾಮನ್‌ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ ಸೇರಿದಂತೆ ಜಗತ್ತಿನ ಪ್ರಮುಖ ಚಾಂಪಿಯನ್‌ಷಿಪ್‌ಗಳಲ್ಲಿ  ಭಾಗವಹಿಸಲು ಸಾಧ್ಯವಾಗಲಿಲ್ಲ. ಪರಿಣಾಮ ರಾಂಕಿಂಗ್‌ನಲ್ಲೂ ಕುಸಿತ ಕಂಡ. ವೈಯಕ್ತಿಕ ಬದುಕೂ ಕಷ್ಟದ ಹಾದಿ ಹಿಡಿಯಿತು. ಬೇರೆ ದಾರಿ ಕಾಣದೆ ಟಿಟಿಗಾಗಿ ಆಕೆಯೊಂದಿಗೆ ಸಪ್ತಪದಿ ತುಳಿದರು.
ರಾಷ್ಟ್ರೀಯ ಚಾಂಪಿಯನ್‌ಷಿಪ್ ಗೆದ್ದ ದೇಶದ ಅತ್ಯಂತ ಕಿರಿಯ ಆಟಗಾರ ಹಾಗೂ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿರುವ ಸೌಮ್ಯಜೀತ್ ಘೋಷ್ ಮೇಲೆ ೧೮ ವರ್ಷದ ಯುವತಿ ಅತ್ಯಾಚಾರದ ಆರೋಪ ಹೇರಿದಾಗ ದಿಕ್ಕು ಕಾಣದಾಯಿತು. ಕೆಲವು ಆಟಗಾರರನ್ನು ಹೊರತುಪಡಿಸಿದರೆ ಬೇರೆ ಯಾರೂ ಅವರ ಸಹಾಯಕ್ಕೆ ಬರಲಿಲ್ಲ. ಇದರಿಂದಾಗಿ ನ್ಯಾಯಾಲಯದ ಮೆಟ್ಟಿಲೇರಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಏಕೆಂದರೆ  ಈ ಸಮಾಜದ ಸ್ಥಿತಿಯೇ ಹಾಗೆ. ಯುವತಿಗೆ ಎಲ್ಲರೂ ಬೆಂಬಲ ನೀಡಿದರು. ಈ ಚಿಂತೆಯಲ್ಲಿ ಚಾಂಪಿಯನ್ ಆಟಗಾರ ಬಹಳ ಮಾನಸಿಕವಾಗಿ ನೊಂದರು. ನಾಲ್ಕು ತಿಂಗಳಲ್ಲಿ ದೇಹದ ತೂಕವೂ ೧೦ ಕೆಜಿ ಜಾಸ್ತಿಯಾಯಿತು. ನಾಲ್ಕು ತಿಂಗಳಲ್ಲಿ ಒಮ್ಮೆ ಟಿಟಿ ರಾಕೆಟ್ ಹಿಡಿದಿರಲಿಲ್ಲ. ಈ ಸಮಸ್ಯೆಯಿಂದ ಹೇಗೆ ಹೊರಗೆ ಬರುವುದು ಎಂದು ಯೋಚಿಸುತ್ತಿರುವಾಗಲೇ ಘೋಷ್ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ಗೆ ಆಯ್ಕೆಯಾಗಿದ್ದರೂ ತಂಡದಿಂದ ಹೊರಗುಳಿಯಬೇಕಾಯಿತು. ಅದೇ ರೀತಿ ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಿಂದಲೂ ಹೊರಗುಳಿಯಬೇಕಾಯಿತು.
‘ಪ್ರತಿಯೊಬ್ಬರೂ ಹುಡುಗಿಯ ಬದುಕಿನ ಬಗ್ಗೆ ಯೋಚಿಸುತ್ತಾರೆ. ಆ ಆರೋಪ ಸತ್ಯವೋ ಸುಳ್ಳೋ ಎಂಬುದರ ಬಗ್ಗೆ ಯೋಚಿಸುವುದಿಲ್ಲ. ಇಲ್ಲಿ ವ್ಯಯವಾಗುವುದು ಕಾಲ. ಈಗ ನನಗೆ ಟೇಬಲ್‌ಟೆನಿಸ್‌ನಲ್ಲಿ ಮುಂದುವರಿಯಬೇಕಾಗಿದೆ. ಅವಳು ಯುವತಿ. ನಾನು ಕೂಡ ಅತ್ಯಂತ ಚಿಕ್ಕ ವಯಸ್ಸಿನವ. ಆಕೆಯೊಂದಿಗೆ ಆತ್ಮೀಯತೆ ಬೆಳೆದಾಗ ೨೨ ವರ್ಷ. ಡೇಟಿಂಗ್‌ಗೆ ಹೋಗುತ್ತಿರುವುದು ನಿಜ. ಈಗ ಮತ್ತೆ ಹಿಂದಿರುಗಿ ನೋಡುವುದರಲ್ಲಿ ಅರ್ಥ ಇಲ್ಲ. ನನ್ನ ಕೋರ್ಟ್ ಕೇಸ್ ಸದ್ಯದಲ್ಲೇ ಮುಗಿಯುತ್ತೆ ಎಂದು ನಂಬಿದ್ದೇನೆ. ಇದರಿಂದಾಗಿ ತರಬೇತಿಯಲ್ಲಿ ತೊಡಗಿಕೊಳ್ಳಬಹುದು,‘ ಘೋಷ್ ಹೇಳಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಆತ್ಮವಿಶ್ವಾಸ ಹೊಂದಿದ್ದ ಘೋಷ್, ಮಾರ್ಚ್ ತಿಂಗಳಲ್ಲಿ ಜರ್ಮನಿಯಲ್ಲಿ ತರಬೇತಿ ಪಡೆಯುತ್ತಿರುವಾಗ ಈ ಆಘಾತಕರ ಸುದ್ದಿ ಅವರನ್ನು ಪ್ರಪಾತಕ್ಕೆ ಕೊಂಡೊಯ್ದಿತು. ಪಶ್ಚಿಮ ಬಂಗಾಳದ ಬರಸಾತ್‌ನ ೧೮ ವರ್ಷದ ಯುವತಿ ಘೋಷ್ ಅವರ ಅನುಪಸ್ಥಿತಿಯಲ್ಲಿ ಆರೋಪ ಮಾಡಿದಳು. ಬಂಧ‘ನಕ್ಕೊಳಗಾಗುತ್ತೇನೆ ಎಂದು ಅರಿತ ಘೋಷ್ ಯೂರೋಪ್‌ನ ಕೆಲವು ರಾಷ್ಟ್ರಗಳಲ್ಲೇ ದಿನಗಳನ್ನು ಕಳೆದರು. ಮೇ ತಿಂಗಳಲ್ಲಿ ಭಾರತಕ್ಕೆ ಹಿಂದಿರುಗಿ ಪ್ರಕರಣದ ವಿರುದ್ಧವಾಗಿ ಹೋರಾಟ ಆರಂಭಿಸಿದರು. ಘೋಷ್ ಅವರ ಹೆತ್ತವರು ಮತ್ತು ಇಬ್ಬರು ಗೆಳೆಯರನ್ನು ಹೊರತುಪಡಿಸಿದರೆ ಬೇರೆ ಯಾರೂ ನೆರವಿಗೆ ಬರಲಿಲ್ಲ. ತಂಡದ ಆಟಗಾರರಾದ ಶರತ್ ಕಮಲ್, ಜಿ. ಸತ್ಯನ್ ಹಾಗೂ ಹರ್ಮೀತ್ ದೇಸಾಯಿ ಘೋಷ್ ಅವರ ನೆರವಿಗೆ ನಿಂತರು. ಒಂದು ವೇಳೆ ಘೋಷ್ ಕಾಮನ್‌ವೆಲ್ತ್ ಗೇಮ್ಸ್ ತಂಡದಲ್ಲಿ ಇರುತ್ತಿದ್ದರೆ  ಭಾರತ ಉತ್ತಮ ಪ್ರದರ್ಶನ ತೋರುತ್ತಿತ್ತು, ಆದರೆ ಹಾಗಾಗಲಿಲ್ಲ. ನಂತರ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ  ಭಾರತ ಉತ್ತಮ ಹೋರಾಟ ನೀಡಿ ಸೋತಿತ್ತು. ಘೋಷ್ ಇರುತ್ತಿದ್ದರೆ  ಭಾ ರತ ಪದಕ ಗೆಲ್ಲುತ್ತಿತ್ತು ಎಂದು ತಂಡದ ಹಿರಿಯ ಆಟಗಾರ ಶರತ್ ಕಮಲ್ ಹೇಳಿದ್ದಾರೆ.
ಕೋಲ್ಕೊತಾದಲ್ಲಿ ನಡೆದ ಔತಣ ಕೂಟದಲ್ಲಿ ಪತ್ನಿ ತುಲಿಕಾ ದತ್ ನೀಡಿರುವ ಹೇಳಿಕೆಯ ಪ್ರಕಾರ ಘೋಷ್ ಅವರ ಕಾನೂನು ಹೋರಾಟ ಆದಷ್ಟು ಬೇಗನೆ ಕೊನೆಗೊಳ್ಳಲಿದೆ. ‘ಕಾನೂನು ರೀತಿಯ ಹೋರಾಟದ ಬಗ್ಗೆ ನನಗೇನೂ ಗೊತ್ತಿಲ್ಲ. ನಮ್ಮ ವಕೀಲರೊಂದಿಗೆ ಮಾತನಾಡಿ ನನ್ನ ಪತಿಯ ಭವಿಷ್ಯದ ಬಗ್ಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಅವರು ಆದಷ್ಟು ಬೇಗ ಮತ್ತೆ ಟೇಬಲ್ ಟೆನಿಸ್ ಆಡಬೇಕು. ನಮ್ಮಿಬ್ಬರ ನಡುವೆ ತಪ್ಪು ಗ್ರಹಿಕೆಗೆ ಬೇಗನೆ ತೆರೆ ಬೀಳಲಿದೆ, ಎಂದರು.

Related Articles