Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವಿಶ್ವ ಕೆಟ್ಲ್‌ಬೆಲ್‌ ಚಾಂಪಿಯನ್‌ಷಿಪ್‌: ನಿರವ್‌ ಕೋಲಿಗೆ ಎರಡು ಚಿನ್ನ

ಬೆಂಗಳೂರು: ಭಾರತದಲ್ಲಿ ಅಪೂರ್ವ ವೆನಿಸಿರುವ ಕ್ರೀಡೆ ಕೆಟಲ್‌ಬೆಲ್.ಯೂರೋಪ್‌ನಲ್ಲಿ ಬಹಳ ಜನಪ್ರಿಯವಾಗಿದೆ. ಆದರೆ ಮುಂಬೈಯಲ್ಲಿದ್ದುಕೊಂಡು ಈ ಕ್ರೀಡೆಯನ್ನು ಕರಗತ ಮಾಡಿಕೊಂಡಿರುವ ಭಾರತದ ನಿರವ್‌ ಕೋಲಿ ಗ್ರೀಸ್‌ನಲ್ಲಿ ಜರಗಿದ 29ನೇ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಈ ಸಾಧನೆಯೊಂದಿಗೆ ನಿರವ್‌ ಈ ಕ್ರೀಡೆಯಲ್ಲಿ ಕ್ಯಾಂಡಿಡೇಟ್‌ ಮಾಸ್ಟರ್‌ ಆಫ್‌ ಸ್ಪೋರ್ಟ್ಸ್‌ (CMS) ರಾಂಕ್‌ ಗಳಿಸಿದ ಭಾರತದ ಅತ್ಯಂತ ಕಿರಿಯ ಕ್ರೀಡಾಪಟುಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜುಲೈ 1 ರಿಂದ 10ರವರೆಗೆ ಗ್ರೀಸ್‌ನ ಲೌಟ್ರಾಕಿಯಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಭಾರತದಿಂದ ವಿನಯ್‌ ಸಾಂಗ್ವಾನ್‌, ಶಿವಾನಿ ಅಗರ್ವಾಲ್‌, ಪ್ರೇಮ್‌ ರಜಪೂತ್‌, ಯೋಗೇಶ್ವರ್‌ ಶರ್ಮಾ ಮತ್ತು ನಿರವ್‌ ಕೋಲಿ ಭಾರತದ ತಂಡದಲ್ಲಿದ್ದರು, ಈ ತಂಡವನ್ನು ಗ್ರೀಸ್‌ನಲ್ಲಿರುವ ಭಾರತ ರಾಯಭಾರಿ ಕಚೇರಿಗೆ ಆಹ್ವಾನಿಸಿ ಅಭಿನಂದಿಸಲಾಯಿತು.

ಏನಿದು ಕೆಟಲ್‌ಬೆಲ್‌?: ಇದು ಪ್ರತಿಯೊಂದು ಜಿಮ್‌ನಲ್ಲೂ ಕಾಣಸಿಗುತ್ತದೆ. ಫಿರಂಗಿ ಚೆಂಡು ಎಂದೂ ಕರೆಯುತ್ತಾರೆ. ಇದನ್ನು ವಿವಿಧ ರೀತಿಯ ಕಸರತ್ತುಗಳಿಗೆ, ಫಿಟ್ನೆಸ್‌ ಕಾಯ್ದುಕೊಳ್ಳಲು ಬಳಸುತ್ತಾರೆ. ಇದು ಒಂದು ರೀತಿಯಲ್ಲಿ ವೇಟ್‌ಲಿಫ್ಟಿಂಗ್‌ ಇದ್ದ ಹಾಗೆ. ಇದು ಒಂದು ರೀತಿಯಲ್ಲಿ ತೂಕದ ಕಲ್ಲಿನಂತೆ ಇರುತ್ತದೆ. ಆದರೆ ಒಂದು ಬದಿಯಲ್ಲಿ ಹಿಡಿ ಇದ್ದು, ಉಳಿದಂತೆ ಗೋಲಾಕಾರವಾಗಿರುತ್ತದೆ. 18ನೇ ಶತಮಾನದಲ್ಲಿ ಗ್ರೀಸ್‌ನಲ್ಲಿ ಇದನ್ನು ಬೆಳೆಗಳನ್ನು ತೂಕಮಾಡಲು ಬಳಸುತ್ತಿದ್ದರು.

ನಂತರ 19ನೇ ಶತಮಾನದಲ್ಲಿ ಬಲಿಷ್ಠ ಪುರುಷರನ್ನು ಆಯ್ಕೆ ಮಾಡಲು ಕೆಟಲ್‌ಬೆಲ್‌ ಎತ್ತುವ ಸ್ಪರ್ಧೆ ನಡೆಸುತ್ತಿದ್ದರು. ಸುಮಾರು 16.38ಕೆಜಿ ತೂಕವಿರುವ ಈ ಲೋಹದ ಸಾಧನವನ್ನು ಕ್ರೀಡಾಪಟುಗಳ ಸಾಮರ್ಥ್ಯ ಅಳೆಯುವ ಸ್ಪರ್ಧೆಗೆ ಬಳಸಲಾಯಿತು. ನಂತರ 1885ರಿಂದ ಸ್ಪರ್ಧಾತ್ಮಕ ಕ್ರೀಡೆಯಾಗಿ ರೂಪುಗೊಂಡಿತ್ತು. ಇದನ್ನು ಎತ್ತು ವಿಧಾನದಲ್ಲಿ 15ಕ್ಕೂ ಹೆಚ್ಚು ಪ್ರಕಾರಗಳಿವೆ. ವೇಟ್‌ಲಿಫ್ಟಿಂಗ್‌ ಮತ್ತು ಪವರ್‌ಲಿಫ್ಟಿಂಗ್‌ನಲ್ಲಿರುವಂತೆ ಮಾಧರಿಗಳೂ ಇವೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.