Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸ್ವಸ್ಥಿಕ್‌ ಯೂನಿಯನ್‌ 2 ಅಂತರ್‌ ಕ್ಲಬ್‌ ಟೂರ್ನಿ ಚಾಂಪಿಯನ್‌

ಬೆಂಗಳೂರು:

ಯುವ ಬೌಲರ್‌ ಧೀರಜ್‌ ಗೌಡ (49ಕ್ಕೆ 7) ಅವರ ಮಾರಕ ಬೌಲಿಂಗ್‌ ದಾಳಿ ಹಾಗೂ ಶಿವಂ ಎಂ.ಬಿ. (135) ಅವರ ಆಕರ್ಷಕ  ಶತಕದ ನೆರವಿನಿಂದ ಸ್ವಸ್ಥಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ 2 ಈ ವರ್ಷದ 19ವರ್ಷ ವಯೋಮಿತಿಯ ಅಂತರ್‌ ಕ್ಲಬ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ವಿಜಯ ಕ್ರಿಕೆಟ್‌ ಕ್ಲಬ್‌ ಧೀರಜ್‌ ಜೆ. ಗೌಡ ಅವರ ದಾಳಿಗೆ ಸಿಲುಕಿ 67.1 ಓವರ್‌ಗಳಲ್ಲಿ 236 ರನ್‌ ಗಳಿಸಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತು. ವಿಜಯ ಕ್ರಿಕೆಟ್‌ ಕ್ಲಬ್‌ ಪರ ವಿಜಯರಾಜ್‌ ಬಿ. 145 ರನ್‌ ಗಳಿಸಿ ಸಾಧಾರಣ ಮೊತ್ತಕ್ಕೆ ನೆರವಾದರು. ಅವರು 119 ಎಸೆತಗಳನ್ನೆದುರಿಸಿ 21 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ ಕುಸಿದ ತಂಡಕ್ಕೆ ನೆರವಾದರು. ಸ್ವಸ್ಥಿಕ್‌ ಯೂನಿಯನ್‌ 2 ಪರ ಧೀರಜ್‌ ಗೌಡ ಕೇವಲ 49 ರನ್‌ ನೀಡಿ 7 ವಿಕೆಟ್‌ ಕಬಳಿಸುವ ಮೂಲಕ ವಿಜಯ ಕ್ರಿಕೆಟ್‌ ಕ್ಲಬ್‌ನ ರನ್‌ ಗಳಿಕೆಗೆ ಕಡಿವಾಣ ಹಾಕಿದರು.

ಶಿವಂ 77ನೇ ಶತಕ!: ಸ್ವಸ್ಥಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ನ ಆಟಗಾರ ಶಿವಂ ಎಂಬಿ 112 ಎಸೆತಗಳನ್ನೆದುರಿಸಿ 12 ಬೌಂಡರಿ ಹಾಗೂ 6 ಸಿಕ್ಸರ್‌ ನೆರವಿನಿಂದ 135 ರನ್‌ ಸಿಡಿಸುವ ಮೂಲಕ ಸ್ವಸ್ಥಿಕ್‌ ತಂಡ 9 ವಿಕೆಟ್‌ ನಷ್ಟಕ್ಕೆ 420 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿತು. ಇದು ಶಿವಂ ಎಂಬಿ ವಿವಿಧ ಲೀಗ್‌ಗಳಲ್ಲಿ ಗಳಿಸಿದ 77ನೇ ಶತಕವಾಗಿದೆ. ಸ್ವರೂಪ್‌ ಎಚ್‌ಎಸ್‌ 94, ಹರ್ಷಲ್‌ 52, ಮನ್ವಂತ್‌ ಕುಮಾರ್‌ 52* ಹಾಗೂ ಲಕ್ಷಣ್‌ (32) ಅವರು ತಂಡದ ಬೃಹತ್‌ ಮೊತ್ತಕ್ಕೆ ನೆರವಾದರು. ವಿಜಯ ಕ್ರಿಕೆಟ್‌ ಕ್ಲಬ್‌ ಪರ ಪ್ರಖಾರ್‌ ಚತುರ್ವೇದಿ ಹಾಗೂ ದ್ರುವ ತಲಾ 2 ವಿಕೆಟ್‌ ಗಳಿಸಿದರು.

ಪಂದ್ಯ ಡ್ರಾದಲ್ಲಿ ಕೊನೆಗೊಂಡು ಸ್ವಸ್ಥಿಕ್‌ ಯೂನಿಯನ್‌ 2 ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು.

ತಂಡದ ವಿವರ:  ಇರ್ಫಾನ್‌ ಸೇಠ್‌ (ಪ್ರಧಾನ ಕೋಚ್‌), ಅಲ್ಫೇನ್‌, ಮೊಹಮ್ಮದ್‌ ಆರ್ಫ್‌, ಸಿದ್ಧಾರ್ಥ್‌ ವಿ.ಎಸ್‌, ಮಾಂಕಲೇಶ್‌, ಲಕ್ಷಣ್‌ ಎಸ್‌, ಚಿರಾಗ್‌ ರಾಜೇಶ್‌, ಸಚಿನ್‌ ಎಸ್‌,ಎ. ಮೊಹಮ್ಮದ್‌ ಫಾಯ್ಜ್‌, ಸುಹಾಸ್‌, ಮೊಹಮ್ಮದ್‌ ನಾಸಿರುದ್ದೀನ್‌.

ಶ್ರೀಧರ್‌ ಜಗ್ತಾಪ್‌, ಧೀರಜ್‌ ಜೆ. ಗೌಡ, ಕರಣ್‌ ಉಮೇಶ್‌, ಸ್ವರೂಪ್‌ ಎಚ್‌.ಎಸ್‌, ಶಿವಂ ಎಂ.ಬಿ, ಮನ್ವಂತ್‌ ಕುಮಾರ್‌, ಹರ್ಷಿಲ್‌ ಧರ್ಮಾನಿ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.