Sunday, September 8, 2024

ಬಿಜಾಪುರ ರಾಷ್ಟ್ರೀಯ ಸೈಕ್ಲಿಂಗ್‌ಗೆ ಸರಕಾರದ ಹೆಚ್ಚಿನ ನೆರವಿನ ಅಗತ್ಯವಿದೆ

ಬಿಜಾಪುರ: ಸೈಕ್ಲಿಂಗ್‌ನ ಕಾಶಿ ಎನಿಸಿರುವ ಉತ್ತರ ಕರ್ನಾಟಕದ ಬಿಜಾಪುರದಲ್ಲಿ ಇದೇ ತಿಂಗಳ 9, 10, 11 ಮತ್ತು 12 ರಂದು ನಾಲ್ಕು ದಿನಗಳ ಕಾಲ ರಾಷ್ಟ್ರೀಯ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. 772 ಮಂದಿ ಸೈಕ್ಲಿಸ್ಟ್‌ಗಳು, 250 ಅಧಿಕಾರಿಗಳು  ಪಾಲ್ಗೊಳ್ಳುತ್ತಿರುವ ಈ ರಾಷ್ಟ್ರೀಯ ಸೈಕ್ಲಿಂಗ್‌‌ ಚಾಂಪಿಯನ್‌ಷಿಪ್‌ಗೆ ರಾಜ್ಯ ಸರಕಾರ ಕೇವಲ 2 ಲಕ್ಷ ರೂ, ನೀಡುವುದಾಗಿ ಘೋಷಿಸಿದೆ. ಉತ್ತರ ಕರ್ನಾಟಕದ ಬಗ್ಗೆ ಸರಕಾರಕ್ಕೆ ಈ ರೀತಿಯ ತಾತ್ಸಾರ ಮನೋಭಾವನೆ ಯಾಕೆ ಎಂದು ಸಂಘಟಕರು ಕೇಳುತ್ತಿದ್ದಾರೆ. National road cycling championship at Bijapur

ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ 1998ರ ನಂತರ ಇದೇ ಮೊದಲ ಬಾರಿ ನಡೆಯುತ್ತಿದೆ. 25 ವರ್ಷಗಳ ನಂತರ ಮೊದಲ ಬಾರಿಗೆ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ನಡೆಯುತ್ತಿದೆ. ಕಳೆದ ಬಾರಿ ರಾಜಸ್ಥಾನದಲ್ಲಿ ನಡೆದಿತ್ತು. 2006ರಲ್ಲಿ ಕರ್ನಾಟಕ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನ ಆತಿಥ್ಯ ವಹಿಸಿತ್ತು.

“ಈ ಬಾರಿ ನಮ್ಮ ರಾಜ್ಯದಲ್ಲಿ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ನಡೆಯುತ್ತಿದೆ. ಸಾಕಷ್ಟು ಹಣ ವ್ಯಯವಾಗಲಿದೆ. ನಾವು ಮಾಜಿ ಸೈಕ್ಲಿಸ್ಟ್‌ಗಳು ಸೇರಿಕೊಂಡು ಹಣ ಒಗ್ಗೂಡಿಸುತ್ತಿದ್ದೇವೆ, ಸರಕಾರ ಕೇವಲ 2 ಲಕ್ಷ ರೂ. ನೀಡುವುದಾಗಿ ಹೇಳಿದೆ. ಸೈಕ್ಲಿಸ್ಟ್‌ಗಳು ಮತ್ತು ಅಧಿಕಾರಿಗಳು ಸೇರಿ ಸಾವಿರಕ್ಕೂ ಹೆಚ್ಚು ಜನರು ಸೇರುತ್ತಾರೆ. ಸರಕಾರ ಇನ್ನೂ ಹೆಚ್ಚಿನ ನೆರವು ನೀಡಿರುತ್ತಿದ್ದರೆ ಅನುಕೂಲವಾಗುತ್ತಿತ್ತು,” ಎಂದು ಕರ್ನಾಟಕ ಸೈಕ್ಲಿಂಗ್‌ ಅಸೋಸಿಯೇಷನ್‌ನ ಅಧ್ಯಕ್ಷ ರಾಜು ಬಿರಾದಾರ ಅವರು ಹೇಳಿದ್ದಾರೆ.

ಒಟ್ಟು 32 ರಾಜ್ಯಗಳಿಂದ ಸೈಕ್ಲಿಸ್ಟ್‌ಗಳು ಆಗಮಿಸುತ್ತಿದ್ದು, 14, 16 ಮತ್ತು 18 ವಯೋಮಿತಿಯ ಬಾಲಕ ಮತ್ತು ಬಾಲಕಿಯರಿಗಾಗಿ ಸ್ಪರ್ಧೆ ನಡೆಯುತ್ತಿದ್ದು, ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿವೆ. ಕರ್ನಾಟಕದ ನವೀನ್‌ ಜಾನ್‌ ಅವರು ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿದ್ದಾರೆ.

Related Articles