Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರಾಷ್ಟ್ರೀಯ ಡ್ರ್ಯಾಗ್‌ ರೇಸಿಂಗ್‌ನಲ್ಲಿ ದಾಖಲೆ ಬರೆದ 12ರ ಪೋರ ಬೆಂಗಳೂರಿನ ಶ್ರೇಯಸ್‌!

ಬೆಂಗಳೂರು: ಚೆನ್ನೈನಲ್ಲಿ ನಡೆದ ಇಂಡಿಯನ್‌ ನ್ಯಾಷನಲ್‌ ಡ್ರ್ಯಾಗ್‌ ರೇಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ 12ರ ಹರೆಯದ ಶಾಲಾ ಬಾಲಕ ಶ್ರೇಯಸ್‌ ಹರೀಶ್‌ ನೂತನ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.

ರಾಕರ್ಸ್‌ ರೇಸಿಂಗ್‌ ತಂಡವನ್ನು ಪ್ರತಿನಿಧಿಸುತ್ತಿದ್ದ ಶ್ರೇಯಸ್‌ ಹರೀಶ್‌ RX135 ಬೈಕ್‌ ಚಲಾಯಿಸಿ 12.615 ಸೆಕೆಂಡುಗಳಲ್ಲಿ ಗುರಿ ತಲುಪಿ ನೂತನ ರಾಷ್ಟ್ರೀಯ ದಾಖಲೆ ಬರೆದರು. 402 ಮೀ. ದೂರವನ್ನು 12.6 ಸೆಕೆಂಡುಗಳಲ್ಲಿ ಗುರಿ ತಲುಪಿದ ಶ್ರೇಯಸ್‌ ದಾಖಲೆಯೊಂದಿಗೆ ಅಗ್ರ ಸ್ಥಾನ ತಮ್ಮದಾಗಿಸಿಕೊಡರು. ಬೆಂಗಳೂರಿನ ಪ್ರಶಾಂತ್‌ ಮತ್ತು ಅಯಾಜ್‌ ರೆಮ್‌ ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.

ಕಳೆದ ವರ್ಷದಿಂದ ವೃತ್ತಿಪರ ರೇಸಿಂಗ್‌ನಲ್ಲಿ ಭಾಗಿಯಾಗುತ್ತಿದ್ದ ಶ್ರೇಯಸ್‌ ಅವರಿಗೆ ತಂದೆ ಹರೀಶ್‌ ಅವರು ಬೆಂಬಲವಾಗಿ ನಿಂತಿದ್ದಾರೆ. ಜಾಗತಿಕ ಮಟ್ಟದಲ್ಲಿ ಚಾಂಪಿಯನ್‌ ಪಟ್ಟ ಗೆದ್ದು ಭಾರತದ ತ್ರಿವರ್ಣ ಧ್ವಜ ಹಿಡಿಯುವುದು ಈ ಪುಟ್ಟ ಬಾಲಕನ ಗುರಿಯಾಗಿದೆ. ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ನಡೆದ ಮಿನಿಜಿಪಿ ವಿಶ್ವ ಸರಣಿಯಲ್ಲಿ ಭಾರತದ ಚಾಂಪಿಯನ್‌ ಪಟ್ಟ ಗೆದ್ದಿದ್ದ ಶ್ರೇಯಸ್‌, ನಂತರ ಸ್ಪೇನ್‌ನಲ್ಲಿ ನಡೆದ ವಿಶ್ವ ಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ವಿಶ್ವದಲ್ಲಿ ಟಾಪ್‌ 10 ಸ್ಥಾನಿಗಳಲ್ಲಿ ಶ್ರೇಯಸ್‌ ಕೂಡ ಒಬ್ಬರು. ಲ್ಯಾಪ್‌ ಒಂದನ್ನು 45 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ಶ್ರೇಯಸ್‌ ಚಾಂಪಿಯನ್‌ ಪಟ್ಟ ಗೆದ್ದ ರೈಡರ್‌ಗಿಂತ ಒಂದು ಸೆಕೆಂಡ್‌ ಹಿಂದೆ ಬಿದ್ದಿದ್ದರು.

ಎಂಆರ್‌ಎಫ್‌ ಎಂಎಂಎಸ್‌ಸಿ ಇಂಡಿಯನ್‌ ನ್ಯಾಷನಲ್‌ ಚಾಂಪಿಯನ್‌ಷಿಪ್‌ನ D ಗ್ರೂಪ್‌ ರೇಸಿಂಗ್‌ನಲ್ಲಿ ಜಯ ಗಳಿಸಿದ ಭಾರತದ ಅತ್ಯಂತ ಕಿರಿಯ ರೇಸರ್‌ ಎಂಬ ಹೆಗ್ಗಳಿಕೆಗೆ ಶ್ರೇಯಸ್‌ ಪಾತ್ರರಾಗಿದ್ದಾರೆ.  ಟಿವಿಎಸ್‌ ಅಪಾಚೆ ರೂಕಿಸ್‌ ಕಪ್‌ನಲ್ಲಿ ರೇಸ್‌ವೊಂದನ್ನು ಗೆದ್ದ ಭಾರತದ ಅತ್ಯಂತ ಕಿರಿಯ (11 ವರ್ಷ) ರೇಸರ್‌ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಶ್ರೇಯಸ್‌ಗೆ ಸ್ಪೇನ್‌ನಲ್ಲಿ ತರಬೇತಿ ನೀಡಬೇಕೆಂಬ ಆಶಯ ಹೊಂದಿದ್ದಾರೆ ತಂದೆ ಹರೀಶ್‌, ಈಗಾಗಲೇ ಶ್ರೇಯಸ್‌ ಒಹ್ವಾಲೆ ಮಿನಿ ಜಿಪಿ ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಫೈಂಟ್‌ವರ್ಕ್‌ ಜೂನಿಯರ್‌ ಜಿಪಿ ವಿಶ್ವಚಾಂಪಿಯನ್‌ಷಿಪ್‌ಗೆ ಶ್ರೇಯಸ್‌ ಹೆಸರು ದಾಖಲಿಸಿಲ್ಪಟ್ಟಿದೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.